AI Impact Summit 2026: ಭಾರತದ ಭವಿಷ್ಯದ ನೀಲನಕ್ಷೆ ತೆರೆದ ನರೇಂದ್ರ ಮೋದಿ; ಮಾನವ ಕಲ್ಯಾಣವೇ ಗುರಿ

mail.prabanjas@gmail.com
ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಬಹುದಾದ ಅವಾಂತರಗಳ ಬಗ್ಗೆ ಜಗತ್ತು ಆತಂಕಗೊಂಡಿರುವ ಮಧ್ಯೆ, ಭಾರತವು ಮಾನವ ಕಲ್ಯಾಣಕ್ಕಾಗಿ AI ತಂತ್ರಜ್ಞಾನದ ಬಳಕೆಯ ಕರೆ ನೀಡಿದೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್‌ ಶೃಂಗಸಭೆ ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ಆಧುನಿಕ ತಂತ್ರಜ್ಞಾನವನ್ನು ಮಾನವ ನಾಗರಿಕತೆಯ ಉನ್ನತಿಗಾಗಿ ಬಳಸುವುದು ಭಾರತದ ಉದ್ದೇಶ” ಎಂದು ಸ್ಪಷ್ಟಪಡಿಸಿದರು. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಭಾರತದ ಭವಿಷ್ಯದ AI ನೀಲನಕ್ಷೆಯನ್ನು ತೆರೆದಿಟ್ಟಿದ್ದು, ಶೃಂಗಸಭೆಯಲ್ಲಿ ಭಾಗವಹಿಸಿರುವ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಮಾನವ ಕಲ್ಯಾಣಕ್ಕಾಗಿ ಉಪಯೋಗಿಸುವುದೇ ಭಾರತದ ಗುರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಇಂದು (ಫೆ.19-ಗುರುವಾರ) ನಡೆದ AI ಇಂಪ್ಯಾಕ್ಟ್‌ ಶೃಂಗಸಭೆ 2026ನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಭವಿಷ್ಯದ AI ನೀಲನಕ್ಷೆಯನ್ನು ಸಭೆಯ ಮುಂದೆ ಬಿಚ್ಚಿಟ್ಟರು.

“ವಿಶ್ವದ ಯುವಕರು AI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ಮತ್ತು ಅದರ ಮಾಲೀಕತ್ವವನ್ನು ಪಡೆದುಕೊಳ್ಳುತ್ತಿರುವ ವೇಗ ನಿಜಕ್ಕೂ ಶ್ಲಾಘನೀಯ. ಭಾರತದಲ್ಲಿ ಆಯೋಜಿಸಿರುವ AI ಶೃಂಗಸಭೆಯ ಬಗ್ಗೆ ಯುವಜನರಲ್ಲಿ ಅಪಾರ ಉತ್ಸಾಹವಿರುವುದನ್ನು ನಾನು ನೋಡಿದ್ದೇನೆ” ಎಂದು ಪ್ರಧಾನಿ ಮೋದಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

AI ಯಂತ್ರಗಳನ್ನು ಹೆಚ್ಚು ಬುದ್ಧಿವಂತವಾಗಿಸುತ್ತದೆ. ಆದರೆ ಅದಕ್ಕೆ ಸಮನಾಗಿ ಮಾನವ ಸಾಮರ್ಥ್ಯಗಳನ್ನೂ ಹೆಚ್ಚಿಸುತ್ತದೆ. AI ತಂತ್ರಜ್ಞಾನದ ಬೆಳವಣಿಗೆಯ ವೇಗ ಅಭೂತಪೂರ್ವವಾಗಿದ್ದು, ಈ ಪ್ರಮಾಣ ನಿಜಕ್ಕೂ ಅನಿರೀಕ್ಷಿತವಾಗಿದೆ. ಹಿಂದೆ, ತಂತ್ರಜ್ಞಾನದ ಪ್ರಭಾವವು ಗೋಚರಿಸಲು ದಶಕಗಳೇ ಬೇಕಾಗುತ್ತಿತ್ತು. ಇಂದು ಯಂತ್ರ ಕಲಿಕೆಯಿಂದ ಕಲಿಕಾ ಯಂತ್ರಗಳವರೆಗಿನ ಅಭಿವೃದ್ಧಿ ಪ್ರಯಾಣವು, ಭಾರೀ ವೇಗವಾಗಿ ಮತ್ತು
ಆಳವಾಗಿ ಹಾಗೂ ವಿಶಾಲವಾಗಿ ಹರಡಿಕೊಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತವು ವಿಶ್ವದ ಅತಿದೊಡ್ಡ ತಂತ್ರಜ್ಞಾನ ಪೂಲ್‌ನ ಕೇಂದ್ರವಾಗಿದೆ. ಭಾರತದಲ್ಲಿ AI ಶೃಂಗಸಭೆಯನ್ನು ಆಯೋಜಿಸುತ್ತಿರುವುದು ಜಾಗತಿಕ ದಕ್ಷಿಣಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಶೃಂಗಸಭೆ ಕೇವಲ AI ತಂತ್ರಜ್ಞಾನದ ಅಭಿವೃದ್ಧಿ ಮಾತ್ರವಲ್ಲದೇ, ಮಾನವ ಕಲ್ಯಾಣಕ್ಕಾಗಿ AI ತಂತ್ರಜಾನದ ಬಳಕೆಯ ಕುರಿತ ಭಾರತದ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಸಾರಿದೆ” ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು

ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿದ್ದು, ಭಾರತವು ಹೊಸ ತಂತ್ರಜ್ಞಾನವನ್ನು ನಿರ್ಮಿಸುವುದಷ್ಟೇ ಅಲ್ಲದೇ ಅದನ್ನು ವೇಗವಾಗಿ ಅಳವಡಿಸಿಕೊಳ್ಳುತ್ತದೆ. ನಮ್ಮ ಮೇಕ್‌ ಇನ್‌ ಇಂಡಿಯಾ ಯೋಜನೆ AI ತಂತ್ರಜ್ಞಾನದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದು, ಇದರ ಪ್ರತಿಫಲವನ್ನು ಇಡೀ ಜಗತ್ತಿಗೆ ಉಣಬಡಿಸುವುದೇ ನಮ್ಮ ಗುರಿ” ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *